ಚಿಕ್ಕೋಡಿ: ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ ಇಂದು ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಸರಕಾರಿ ಪದವಿ ಪೂರ್ವ ಕಾಲೇಜು ಕೆರೂರು ತಾಲೂಕು ಚಿಕ್ಕೋಡಿ ಜಿಲ್ಲೆ ಬೆಳಗಾವಿ ಕಾರ್ಯಕ್ರಮದಲ್ಲಿ ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ನಂದೀಶ್ ಅವರು ಮಾತನಾಡಿ ಪ್ರಸ್ತುತ ದಿನದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಕಾರಣ ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗಿ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಗುಟ್ಕಾ ಸೇವನೆ, ಸಿಗರೇಟ್, ಗಾಂಜಾ ಸೇವನೆ, ಮಾದಕ ವಸ್ತುಗಳಾದ ಡ್ರಗ್ಸ್, ಹೆರಾಯಿನ್ ಮುಂತಾದ ಅನಾರೋಗ್ಯಕರ ವಸ್ತುಗಳ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ.
ಈ ಅಪಾಯಕಾರಿ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುತ್ತಿದ್ದಾವೆ. ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮೊದಲು ಗಂಡು ಮಕ್ಕಳು 21 ವರ್ಷಕ್ಕಿಂತಲೂ ಮೊದಲು ವಿವಾಹವಾಗುವುದು ಅಪರಾಧ, ಆದರೆ ಇಂದು ಹೈಸ್ಕೂಲ್ ಹಂತದಲ್ಲಿಯೇ ಹುಡುಗ ಮತ್ತು ಹುಡುಗಿ ಮೊಬೈಲ್ ನಲ್ಲಿ ಬರುವ ಅಶ್ಲೀಲ ವಿಡಿಯೋಗಳನ್ನು ನೋಡಿ ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿಗಳಿಗೆ ಹೇಳದೆ ಮನೆಯಿಂದ ಓಡಿ ಹೋಗಿ ಮದುವೆಯಾಗುವ ಪ್ರಕರಣಗಳು, ಕಾಣೆಯಾದ ಪ್ರಕರಣಗಳು ಹೆಚ್ಚಳವಾಗುತ್ತಿವೆ ಇದು ಸಮಾಜಕ್ಕೆ ಅತ್ಯಂತ ಕಳವಳಿಕಾರಿ ವಿಷಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರು ಶ್ರೀಶೈಲ್ ಕೋಲಾರ್ ಅವರು ಮಾತನಾಡಿ ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಇಂದಿನ ಮಕ್ಕಳು ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಅಂದರೆ ತಾತ್ಕಾಲಿಕ ಸುಖಕ್ಕಾಗಿ ಮಕ್ಕಳು ವಾಮ ಮಾರ್ಗ ಹಿಡಿದು ನಗರ ಪ್ರದೇಶದಲ್ಲಿ ಸರಳವಾಗಿ ಮಕ್ಕಳ ಕೈಗೆ ಮತ್ತು ಬರುವ ಔಷಧಿಗಳು, ಡ್ರಗ್ಸ್, ತಂಬಾಕು ಹೆರಾಯಿನ್, ಸಿಗರೇಟು, ಅಪಾಯಕಾರಿಯಾದ ಪಾನಿಯಗಳು ಸೇವನೆಯಿಂದ ಹಾಳಾಗುತ್ತಿದ್ದಾರೆ. ಇದರ ಬದಲಾಗಿ ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಕುಟುಂಬಕ್ಕೆ ಒಳ್ಳೆಯ ಮಗನಾಗಿ, ಶಾಲೆಗೆ ಉತ್ತಮ ವಿದ್ಯಾರ್ಥಿಯಾಗಿ, ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕು ಎಂದು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಅಂಕಲಿ ಪೊಲೀಸ್ ಠಾಣೆಯ ಆನಂದ ತೇರದಾಳ, ಸಪ್ತಸಾಗರ ಸರ್, ದಲ್ವಾರ ಸರ್, ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಶಂಕರ್ ತೇಲಿ, ಅಮೂಲ್ ಧಾನೋಳಿ, ಪ್ರತಿಭಾ ವಟ್ನಾಳ, ಉಪಸ್ಥಿತರಿದ್ದರು.
ಕವಿತಾ ಮಲಬಣ್ಣವರ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀ ಶಂಕರ್ ತೇಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.